ಮಣ್ಣನ್ನೇ ತನ್ನ ಜೀವನದ ಆಧಾರವೆಂದುನಂಬಿ, ನಮ್ಮ ರಾಷ್ಟ್ರದ ಬೆನ್ನೆಲುಬಾಗಿ ನಿಂತಿರುವ ರೈತನಿಗೆ ಒಂದು ನಮನ (ಕುವೆಂಪು ರವರ ಸುಂದರ ರಚನೆ, ಸಿ. ಅಶ್ವಥ್ ಅವರ ಕಂಠ ಸಿರಿಯಲ್ಲಿ, ಡಾ. ರಾಜ್ ರ ಮೇಲೆ ಚಿತ್ರಿಸಲ್ಪಟ್ಟ ಈ ಹಾಡನ್ನು ಇಲ್ಲಿ ನೋಡಿ ಆನಂದಿಸಿರಿ)
ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿನಿಯಮದೊಳಗವನೇ ಭೋಗೀ
ಉಳುವಾ ಯೋಗಿಯ ನೋಡಲ್ಲಿ ||
ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||
ಉಳುವಾ ಯೋಗಿಯ ನೋಡಲ್ಲಿ ||
ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||
ಉಳುವಾ ಯೋಗಿಯ ನೋಡಲ್ಲಿ ||